ನಿನ್ನ ಹೊಕ್ಕುಳಲ್ಲಿ ತಿಗಣೆಗಳು ಆಶ್ರಯಿಸಿದ್ದವು
ನಿನ್ನೊಡಲಿನ ಖುಶಿಯನ್ನು
ಅವು ತುಟಿ ಅಮುಕಿ ಚಿಪುತ್ತಿದ್ದವು
ಭದ್ರಕಾಳಿಯೇ,
ನಿನ್ನ ಚೂಪು ಉಗುರುಗಳಿಂದ
ಎಷ್ಟೋ ರಕ್ತಪಿಪಾಸುಗಳ
ರುಂಡ ಜಜ್ಜಲು ಹವಣಿಸುತ್ತಿರುವೆಯಲ್ಲಾ?!
ವಿಶಾಲಾಕ್ಷಿಯೇ,
ಭಕ್ತರು ನಿನ್ನ ಬಿರಿದ ಸೌಂದರ್ಯ ನೋಡಿ
ಪೂಜಿಸುವ ನೆಪದಲ್ಲಿ ಸಂಧಿಮಾಡಿ
ಕಣ್ಣು ಹೊಡೆದು
ಕಸುವುಳ್ಳ ಮಡಿಲ ವಾಸ ಬೇಡುವರು
ಪುಷ್ಟವಾದ ತೋಳ ಸಂಗಾತ ಬಯಸುವರು
ಪವಿತ್ರ ಬಂಧವೆAದು ಅರ್ಚಿಸುವರು
ರಕ್ತೇಶ್ವರಿಯೇ,
ನಿನ್ನ ಜಪಿಸಿ ಪಲ್ಲಕ್ಕಿ ಹೊತ್ತು, ಅಭಿಷೇಕ ನಡೆಸಿ
ಹೂವ ಮಡಿಗಿಟ್ಟು ಅದದೇ ಮಂತ್ರ ಹೇಳುತ್ತಾ
ಜಾಗಟೆ ಬಾರಿಸುತ್ತಾ ದಿನ ಮಾಸ ಕಳೆಯಿತು
ವರುಷ ಸಮೀಪಿಸಿ ನೀನು ಒಲಿದೇಬಿಟ್ಟೆ!
ಈಗ ನೀನು ಬರೀ ಚಿಟ್ಟೆ
ಅತೃಪ್ತಿಯ ಚಿತ್ತಾರದ ರಕ್ಕೆಗಳ ಪತಂಗ
ಈಗ ನಿನ್ನ ಮೊಲೆಗಳಿಂದ ಹಾಲು ಬರದು
ನಿನ್ನ ದೇಹದ ಸಂದಿನಲ್ಲಿ ರಕ್ತ ಹರಿಯದು
ಬಿಡೇ... ಯಾವ ತಿಗಣೆಯೂ ನಿನ್ನ ಕಚ್ಚದು!
ಪ್ರೇಮ ದುಂಧುರೇ,
ವರುಷ ಮೀರಿದಂತೆ ನೀನು ಒಲಿದೇಬಿಟ್ಟೆ
ಹೆರಳಿಗೆ ಹೂವ ತೊಡಿಸಿದವ
ಒಂದು ಮಲ್ಲಿಗೆ ಮುಗಟನ್ನೂ ಕೊಟ್ಟರೆ ಕೇಳು!
ಮಂತ್ರ ಪಠಿಸಿದವ
ಒಂದು ರಮ್ಯ ಅಕ್ಷರವ ಬರೆದರೆ ಕೇಳು!
ಎರಡೂ ಕೈಗಳಿಂದ ಪಲ್ಲಕ್ಕಿ ಹೊತ್ತವ
ಜೀವನದ ನಡುವೆ ಕೈಚೆಲ್ಲಿ ಕೂರದಿದ್ದರೆ
ಕೇಳು! ಕೇಳು! ಕೇಳು!
ಆಗ ನೆನಪಾಗಿ ನೀನು ಹೇಳುತ್ತೀ...
ಓ ತಿಗಣೆಯೇ ಎಲ್ಲಿ ಅವಿತಿರುವೆ
ಬಾ ತಿಗಣೆ ಇಲ್ಲಿ ನನ್ನ ಹೊಕ್ಕುಳ ಕಚ್ಚು ಬಾ
ಒಂದೇ ಸಮಾ ಈ ವೇದನೆ ಸಂಕಟವ ಹೀರು
ಪೂರಾಪೂರ ಹೀರು ಎಲ್ಲಿರುವೆ ತಿಗಣೆಯೇ?
-ಅಕ್ಷಯ ಕಾಂತಬೈಲು